ಇಷ್ಟು ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರಗಳು ನಡೆದರೆ ಅದನ್ನೇ ಎತ್ತಿ ಹಿಡಿಯಬಾರದು: ಕೇಂದ್ರ ಸಚಿವ
ನ್ಯೂಸ್ ಕನ್ನಡ ವರದಿ-(22.04.18): ನಮ್ಮ ದೇಶದಲ್ಲಿ ಹಲವಾರು ದಿನಗಳಿಂದ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಇದೀಗ ಈ ಕುರಿತಾದಂತೆ ಹೇಳಿಕೆ ನಿಡಿದ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್, ಭಾರತದಂತಹ ದೊಡ್ಡ ರಾಷ್ಟ್ರಗಳಲ್ಲಿ ಒಂದೆರಡು ಅತ್ಯಾಚಾರಗಳು ನಡೆದರೆ ಅದನ್ನೇ ಎತ್ತಿ ಕಟ್ಟಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಥುವಾ ಮತ್ತು ಉನ್ನಾವ್ ಅತ್ಯಾಚಾರಗಳ ಬಗ್ಗೆ ಪ್ರಶ್ನಿಸಿದಾಗ ಸಚಿವರು ಈ ಹೇಳಿಕೆ ನೀಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
‘ಇಂತಹ ಘಟನೆಗಳು ಅನಿರೀಕ್ಷಿತ.ಕೆಲವೊಮ್ಮೆ ನೀವು ಅವುಗಳನ್ನು ತಡೆಯಲು ಸಾಧ್ಯವಿಲ್ಲ. ಸರ್ಕಾರ ಸಕ್ರಿಯವಾಗಿದ್ದು ಎಲ್ಲೆಡೆ ಕ್ರಮ ತೆಗೆದುಕೊಳ್ಳುತ್ತಿರುವುದು ಎಲ್ಲರಿಗೂ ಗೋಚರಿಸುವ ವಿಚಾರ’ ಎಂದರು. 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆವಿಧಿಸುವ ಕಠಿನ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಹೊರಡಿಸಿದ್ದ ಅಧ್ಯಾದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ ಬೆನ್ನಲ್ಲೇ ಈ ಹೇಳಿಕೆ ನೀಡಿ ಗಂಗ್ವಾರ್ ವಿವಾದಕ್ಕೆ ಸಿಲುಕಿದ್ದಾರೆ.