ಮದುವೆ ದಿನ ಪರೀಕ್ಷೆ ಬರೆದು ಮುಗಿಸಿದ ನಂತರವೇ ತಾಳಿ ಕಟ್ಟಿಸಿಕೊಂಡ ವಧು!
ನ್ಯೂಸ್ ಕನ್ನಡ ವರದಿ: ಮಂಡ್ಯದಲ್ಲಿ ವರದಿಯಾದ ವಿಶೇಷ ಸುದ್ದಿ. ಮದುಮಗಳೊಬ್ಬಳು ಮದುವೆ ದಿನ ಪರೀಕ್ಷೆ ಬರೆದು ಮುಗಿಸಿದ ನಂತರವೇ ತಾಳಿ ಕಟ್ಟಿಸಿಕೊಂಡಿರುವ ವಿಶೇಷ ಘಟನೆಗೆ ಮಂಡ್ಯದ ಕೆಆರ್ ಪೇಟೆ ಸಾಕ್ಷಿಯಾಗಿದೆ.
ಎರಡನೇ ವರ್ಷದ ಬಿಕಾಂ ಓದುತ್ತಿದ್ದ ಕಾವ್ಯಾ ಅವರ ಮದುವೆ ಇಂದು ಲೋಹಿತ್ ಜೊತೆ ನಿಶ್ಚಯವಾಗಿತ್ತು. ಬೆಳಗ್ಗೆ 11 ಗಂಟೆಯಿಂದ 11:45 ರ ವರೆಗೆ ಮುಹೂರ್ತ ನಿಶ್ಚಯವಾಗಿತ್ತು. ಆದರೆ ಇಂದು ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಕೂಡ ಇತ್ತು. ಮದುವೆ ಕಾರಣಕ್ಕೆ ಪರೀಕ್ಷೆಗೆ ತೊಂದರೆಯಾಗಬಾರದು ಎಂದು ನಿಶ್ಚಯಿಸಿದ ಗಂಡು ಮತ್ತು ಹೆಣ್ಣಿನ ಮನೆಯವರಿಬ್ಬರು ಕಾವ್ಯಾಳನ್ನು ಪ್ರೋತ್ಸಾಹಿಸಿ ಪರೀಕ್ಷೆ ಬರೆಯಲು ಕಳುಹಿಸಿದ್ದಾರೆ. ಮದುಮಗಳ ಅಲಂಕಾರದಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.
ಕಾವ್ಯಾ ಮುಹೂರ್ತದ ವೇಳೆಗೆ ಪರೀಕ್ಷಾ ಕೇಂದ್ರದಿಂದ ಹೊರಬಂದಿದ್ದಾರೆ. ತಕ್ಷಣ ಕಾವ್ಯಾ ಅವರನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಿ ಸಂಪ್ರದಾಯ ಬದ್ಧವಾಗಿ ವಿವಾಹ ಕಾರ್ಯ ನೆರವೇರಿಸಲಾಗಿದೆ. ಮದುವೆ ದಿನವೂ ಹೆಣ್ಣುಮಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಕುಟುಂಬದವರು ಮತ್ತು ಮದುಮಗಳ ಬಗ್ಗೆ ಎಲ್ಲೆಡೆ ಪ್ರಶಂಸೆ ಕೇಳಿ ಬರುತ್ತಿದೆ.
ಮಾಹಿತಿ ಕೃಪೆ ಪಬ್ಲಿಕ್ ಟಿವಿ ಕನ್ನಡ ನ್ಯೂಸ್