ರಾಹುಲ್ ನೇತೃತ್ವದ ಸರಕಾರವೇ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ : ಅರಣ್ಯ ಸಚಿವ ಸತೀಶ ಜಾರಕಿಹೊಳಿ
ನ್ಯೂಸ್ ಕನ್ನಡ ವರದಿ : ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದ ಯುಪಿಎ ಸರಕಾರವೇ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಸಂಸದ ಪ್ರಕಾಶ ಹುಕ್ಕೇರಿ ಅವರ ಕುರಿತು ಮಾತನಾಡಿ, ದೇಶದಲ್ಲಿ ಎಲ್ಲ ಸಂಸದರಿಗಿಂತ ಪ್ರಕಾಶ ಹುಕ್ಕೇರಿ 5 ವರ್ಷಗಳಲ್ಲಿ ಸುಮಾರು 700 ಕೋಟಿ ರೂ. ಅನುದಾನ ತಂದು, 8 ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯೆಂಬ ಭ್ರಮೆಯ ನಡುವೆಯೂ ಪ್ರಕಾಶ ಹುಕ್ಕೇರಿ ಸಂಸದರಾದರು. ಈಗ ಅವರ ಎದುರಾಳಿ ಯಾರಿದ್ದಾರೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರ ಜಯ ಖಚಿತ ಎಂದರು.
ಇನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಸಂಸದ ಪ್ರಕಾಶ ಹುಕ್ಕೇರಿ, 40 ವರ್ಷಗಳಿಂದಲೂ ಕೇವಲ ಸಮಾಜ ಸೇವೆ ಮಾಡುವ ಗುರಿಯೊಂದಿಗೆ ಹೆಜ್ಜೆ ಇಡುತ್ತಿದ್ದು, ಎಲ್ಲ ಮತದಾರರು ಸ್ವಚ್ಛ ಮನಸ್ಸಿನಿಂದ ನನಗೆ ಮತ ಚಲಾಯಿಸುತ್ತಾರೆ ಎನ್ನುವ ವಿಶ್ವಾಸವಿದೆ. ಸಂಸದ ಪ್ರಕಾಶ ಹುಕ್ಕೇರಿ ಇನ್ನೊಬ್ಬರಂತೆ ಸುಳ್ಳು ಹೇಳದೆ, ಕೇವಲ ‘ಕಾಮ್ ಕಿ ಬಾತ್’ ಅಷ್ಟೇ ಮಾತನಾಡುತ್ತಾರೆ. ಕಾಗವಾಡ ಕ್ಷೇತ್ರದ ಮತದಾರರು ನನಗೆ 80 ಸಾವಿರ ಮತ ನೀಡಿದರು. ಈಗ ಅದಕ್ಕಿಂತ ಹೆಚ್ಚಿನ ಮತವನ್ನು ಹುಕ್ಕೇರಿಯವರಿಗೆ ನೀಡುವ ಜವಾಬ್ದಾರಿ ನಮಗಿದೆ ಎಂದರು.