ರಾಜೀವ್ ಗಾಂಧಿ ಹತ್ಯೆ ಪ್ರಕರಣ ಆರೋಪಿ ನಳಿನಿಗೆ ಮದ್ರಾಸ್ ಹೈಕೋರ್ಟ್ ನಿಂದ 1 ತಿಂಗಳ ಪೆರೋಲ್ !
ನ್ಯೂಸ್ ಕನ್ನಡ ವರದಿ : 1991 ಮೇ ತಿಂಗಳಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ನಡೆದಿತ್ತು. ತಮಿಳುನಾಡಿನ ಶ್ರೀಪೆರಂಬೂರ್ನಲ್ಲಿ ಚುನಾವಣೆ ರ್ಯಾಲಿಯ ಸಮಯದಲ್ಲಿ ಎಲ್ಟಿಟಿಇ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಗೆ ರಾಜೀವ್ ಗಾಂಧಿ ಬಲಿಯಾಗಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಎಸ್. ನಳಿನಿಯನ್ನು ಪೆರೋಲ್ ಮೇಲೆ ಒಂದು ತಿಂಗಳು ಬಿಡುಗಡೆಗೆ ಅವಕಾಶ ನೀಡಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.
ನಳಿನಿ ತನ್ನ ಮಗಳ ಮದುವೆ ಸಿದ್ಧತೆಗಾಗಿ ಆರು ತಿಂಗಳು ಪೆರೋಲ್ ನೀಡಬೇಕೆಂದು ಏಪ್ರಿಲ್ ತಿಂಗಳಲ್ಲಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ತಾವೇ ಖುದ್ದು ಕೋರ್ಟ್ನಲ್ಲಿ ವಾದ ಮಂಡಿಸುವುದಾಗಿ ಹೇಳಿದ್ದರು. ಹೀಗಾಗಿ ಇಂದು ನಳಿನಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. 6 ತಿಂಗಳು ಪೆರೋಲ್ ನೀಡಬೇಕೆಂದು ಮನವಿ ಮಾಡಿದರು. ಆದರೆ ಸರ್ಕಾರಿ ಪರ ವಕೀಲರು ಒಂದು ತಿಂಗಳ ಪೆರೋಲ್ ಸಾಕೆಂದು ವಾದ ಮಂಡಿಸಿದ್ದರು. ನನ್ನ ಮಗಳು ಈಗ ಲಂಡನ್ನಲ್ಲಿ ಇದ್ದಾಳೆ. ನಾನು ನನ್ನ ಗಂಡ ಕಳೆದ 27 ವರ್ಷಗಳಿಂದ ಜೈಲಿನಲ್ಲಿದ್ದೇವೆ. ನಮ್ಮ ಮಗಳು ಜೈಲಿನಲ್ಲಿಯೇ ಹುಟ್ಟಿದ್ದು, ಸಂಬಂಧಿಕರು ಬೆಳೆಸಿದ್ದಾರೆ. ಈಗ ಮದುವೆ ಮಾಡಲು ಸಿದ್ಧತೆ ನಡೆಸಿದ್ದು, ಒಂದು ತಿಂಗಳು ಕಾಲಾವಕಾಶ ಸಾಕಾಗುವುದಿಲ್ಲ ಎಂದು ನಳಿನಿ ಪ್ರತಿವಾದ ಮಾಡಿದ್ದರು. ವಾದ-ಪ್ರತಿವಾದಗಳ ಬಳಿಕ ಮದ್ರಾಸ್ ಹೈಕೋರ್ಟ್ ನಳಿನಿಗೆ ಒಂದು ತಿಂಗಳು ಪೆರೋಲ್ ನೀಡಿ ಆದೇಶ ಹೊರಡಿಸಿದೆ.