ನಿಮಗೆ ತಾಕತ್ತಿದ್ದರೆ ನಮ್ಮ ಸರ್ಕಾರ ಪತನಗೊಳಿಸಿ!: ವಿರೋಧಿಗಳಿಗೆ ಸಿಎಂ ಉಧ್ದವ್ ಠಾಕ್ರೆ ನೇರ ಚಾಲೆಂಜ್
ನ್ಯೂಸ್ ಕನ್ನಡ ವರದಿ: ನಾನು ಮುಖ್ಯಮಂತ್ರಿ ಆದಾಗಿನಿಂದಲೂ ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ಅಘಾಡಿ ಸರ್ಕಾರ (ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ) ಬೀಳುತ್ತೆ ಎಂದು ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ನಿಮಗೆ ತಾಕತ್ತು ಇದ್ರೆ ನಮ್ಮ ಸರ್ಕಾರ ಬೀಳಿಸಿ ನೋಡಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ ವಿರೋಧಿಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ಒಂದು ವರ್ಷವಾಯ್ತು. ಅಂದಿನಿಂದ ಇಂದಿನವರೆಗೂ ಕೆಲವರು ಸರ್ಕಾರ ಪತನವಾಗುತ್ತೆ ಅಂತ ಹೇಳುತ್ತಿದ್ದಾರೆ. ನಿಮಗೆ ತಾಕತ್ತು ಇದ್ರೆ ನಮ್ಮ ಸರ್ಕಾರ ಬೀಳಿಸಿ ಎಂದು ನಾನು ನಿಮಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ. ಕೆಲವರು ರಾಜ್ಯದಲ್ಲಿ ದೇವಸ್ಥಾನಗಳನ್ನು ತೆಗೆಯದಿರುವುದಕ್ಕೆ ಬಾಳಾ ಠಾಕ್ರೆ ಮತ್ತು ನನ್ನ ಹಿಂದುತ್ವ ಬೇರೆ ಎಂದು ಹೇಳುತ್ತಿದ್ದಾರೆ. ನಿಮ್ಮ ಹಿಂದುತ್ವ ಅಂದ್ರೆ ಗಂಟೆ ಬಾರಿಸುವುದು ಮತ್ತು ಭಜನೆ ಮಾಡೋದು ಎಂದರ್ಥ. ನಾವು ಇಷ್ಟು ಚಿಕ್ಕದಾಗಿ ಹಿಂದುತ್ವ ವ್ಯಾಖ್ಯಾನ ಮಾಡಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿಗೆ ಹೆಸರು ಹೇಳದೇ ತಿರುಗೇಟು ನೀಡಿದರು.