28 ವರ್ಷಗಳ ನನ್ನ ಪಕ್ಷ ನಿಷ್ಠೆಗೆ ಬಿಜೆಪಿ ನೀಡಿದ ಬಹುಮಾನವಿದು: ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ
ನ್ಯೂಸ್ ಕನ್ನಡ ವರದಿ(09-04-2018): ನನ್ನ ಸುದೀರ್ಘವಾದ 28 ವರ್ಷಗಳ ಪಕ್ಷ ನಿಷ್ಠೆಗೆ ಬಿಜೆಪಿ ಪಕ್ಷವು ಬಹಳ ದೊಡ್ಡ ಬಹುಮಾನ ನೀಡಿದೆ ಎಂದು ವಿಜಯಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಇದೀಗ ಟಿಕೆಟ್ ವಂಚಿತರಾದ ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ಪಕ್ಷದ ನಾಯಕರ ತೀರ್ಮಾನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ, ಕೊನೆಯ ಹಂತದಲ್ಲಿ ಬೇರೆಯವರ ಹೆಸರು ಘೋಷಣೆ ಮಾಡಲಾಗಿದೆ. ಇದರಿಂದ ನನಗೂ ಹಾಗೂ ಕಾರ್ಯಕರ್ತರಿಗೂ ನೋವಾಗಿದೆ. ನಿಷ್ಠೆಯಿಂದ ದುಡಿದಿದ್ದರಿಂದ ಪಕ್ಷ ನನಗೆ ಕೊಟ್ಟ ಬಹುಮಾನ ಇದಾಗಿದೆ. ಗೆಲ್ಲುವ ಸಮಯದಲ್ಲಿ ಪಕ್ಷ ಹೀಗೆ ಮಾಡಿದ್ದು ನನಗೆ ಆಘಾತ ನೀಡಿದೆ. ಪಕ್ಷ ಬಿಡುವ ಮನಸ್ಸು ನನಗಿಲ್ಲ, ನಾನು ಯೋಚಿಸಿ ಮೂರು ದಿನದಲ್ಲಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು.
ಬಿಜೆಪಿ ಪಕ್ಷ ನನ್ನ ತಾಯಿ ಇದ್ದಂತೆ. ಅದನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಆದರೆ ಮುಂಬರುವ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಕುರಿತು ಕಾರ್ಯಕರ್ತರಲ್ಲಿ ಸಮಾಲೋಚಿಸಿ ಒಂದೆರೆಡು ದಿನದಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದು ಅಪ್ಪು ಪಟ್ಟಣ ಶೆಟ್ಟಿ ಇದೇ ಸಂದರ್ಭದಲ್ಲಿ ತಿಳಿಸಿದರು.