ಖಾತೆ ಬದಲಾವಣೆ ಬೆನ್ನಲ್ಲೇ ಸಚಿವರೊಳಗೆ ಭುಗಿಲೆದ್ದ ಅಸಮಾಧಾನ; ಮಾಧುಸ್ವಾಮಿ ರಾಜೀನಾಮೆ ! ರಾಜೀನಾಮೆಯತ್ತ ಮುಖ ಮಾಡಿರುವ ಕೆಲವು ಸಚಿವರು !!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹಾಲಿ ಸಚಿವರ ಖಾತೆ ಬದಲಾವಣೆ ಮಾಡಿರುವ ಬೆನ್ನಲ್ಲೇ ಸಚಿವರ ಮಧ್ಯೆ ಅಸಮಾಧಾನ, ಆಕ್ರೋಶ ಭುಗಿಲೇದ್ದಿದ್ದು, ಇದು ಇನ್ನಷ್ಟು ತೀವ್ರತೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೆ. ಸುಧಾಕರ್, ಜೆ.ಸಿ ಮಾಧುಸ್ವಾಮಿ ಹಾಗೂ ಗೋಪಾಲಯ್ಯ ಅಸಮಾಧಾನ ಹೊಂದಿದ್ದಾರೆಂದು ಹೇಳಲಾಗುತ್ತಿದ್ದು, ಇನ್ನು ಮತ್ತಷ್ಟು ಸಚಿವರು ತೆರೆಮರೆಯಲ್ಲಿ ಯಡಿಯೂರಪ್ಪ ವಿರುದ್ಧ ಸಿಟ್ಟಾಗಿದ್ದಾರೆ ಎನ್ನಲಾಗಿದೆ.
ಸುಧಾಕರ್ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕಿತ್ತುಕೊಂಡು ಆರೋಗ್ಯ ಇಲಾಖೆ ಉಳಿಸಿದ್ದಾರೆ ಎಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ವೈದ್ಯಕೀಯ ಖಾತೆ ವಾಪಸ್ಸು ಪಡೆದರೆ ರಾಜೀನಾಮೆ ನೀಡುವ ಸಂದೇಶವನ್ನು ರವಾನಿಸಿರುವ ಮಾಹಿತಿ ಇದೆ. ಈ ಹಿಂದೆ ಸುಧಾಕರ್ ಬಳಿ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಎರಡು ಖಾತೆಗಳಿದ್ದವು.
ಇನ್ನು ರೈತರ ಜತೆ ಇರಬಹುದಾದ ಖಾತೆ(ಸಣ್ಣ ನೀರಾವರಿ) ಬದಲಾವಣೆಗೆ ಜೆ.ಸಿ.ಮಾಧುಸ್ವಾಮಿ ಆಕ್ರೋಶಗೊಂಡು ತಮ್ಮ ರಾಜೀನಾಮೆ ಪತ್ರವನ್ನು ಆಪ್ತ ಸಹಾಯಕನಿಗೆ ನೀಡಿ ಜೆಸಿ ಪುರಕ್ಕೆ ವಾಪಸಾಗಿದ್ದಾರೆಂದು ತಿಳಿದುಬಂದಿದೆ.
ಸಣ್ಣ ನೀರಾವರಿ ಬದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಸಾಧ್ಯತೆ ಇರುವುದರಿಂದ ಅಸಮಾಧಾನ ಹೊಂದಿದ್ದಾರೆಂದು ತಿಳಿದುಬಂದಿದೆ. ಇದರೊಂದಿಗೆ ಗೋಪಾಲಯ್ಯರಿಗೆ ಆಹಾರ ಖಾತೆಯ ಬದಲು ಸಕ್ಕರೆ ಮತ್ತು ತೋಟಗಾರಿಗೆ ಖಾತೆ ಬದಲಾವಣೆಯಿಂದ ಅಸಮಾಧಾನ ಹೊಂದಿದ್ದಾರೆಂದು ಹೇಳಲಾಗಿದೆ.
ಹೀಗಾಗಿ ಯಾವುದೇ ಕಾರಣಕ್ಕೂ ಖಾತೆಗಳ ಬದಲಾವಣೆ ಬದಲಾವಣೆ ಬೇಡಿ ಎಂದು ಸಿಎಂಗೆ ಪಟ್ಟು ಹಿಡಿದಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ಪ್ರತಿಕ್ರಿಯೆ ಇಲ್ಲ….
ಅಸಮಾಧಾನ ವಿಚಾರ ಮಾಧ್ಯಮಗಳಲ್ಲಿ ಕೇಳಿಬರುತ್ತಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡದೆ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಸಿಎಂ ಬಿಎಸ್ವೈ ತೆರಳಿದರು. ಅಲ್ಲದೆ, ಸಿಎಂ ಜೊತೆ ಮಾತುಕತೆ ನಡೆಸಿ ಎಂಟಿಬಿ ನಾಗರಾಜ್ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಬೇಸರದಿಂದಲೇ ಹೊರಟರು.