ತಾಯ್ನಾಡಿಗೆ ಬಂದಿಳಿಯುತ್ತಿದ್ದಂತೆ ನೇರವಾಗಿ ವಿಮಾನ ನಿಲ್ದಾಣದಿಂದ ತಂದೆಯ ಸಮಾಧಿಗೆ ತೆರಳಿ ಕಣ್ಣೀರಿಟ್ಟ ಸಿರಾಜ್!
ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೌಲರ್ ಮೊಹಮದ್ ಸಿರಾಜ್ ತುಂಬಾನೇ ಭಾವನಾತ್ಮಕ ವ್ಯಕ್ತಿ. ಎದುರಾಳಿ ಮುಖಕ್ಕೆ ಚೆಂಡು ಬಡಿದಾಗ ಮೊಹಮದ್ ಸಿರಾಜ್ ಓಡೋಡಿ ಹೋಗಿ, ಸಂತೈಸಿದ್ದರು. ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟಿದ್ದರು. ಈಗ ಅವರು ಭಾರತಕ್ಕೆ ವಾಪಾಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿಳಿದು ತಾಯ್ನಾಡಿನಲ್ಲಿ ಕಾಲಿಟ್ಟವರೆ ನೇರವಾಗಿ ತಂದೆಯ ಸಮಾಧಿಗೆ ತೆರಳಿ ನಮನ ಸಲ್ಲಿಸಿ, ಕಣ್ಣೀರಿಟ್ಟಿದ್ದಾರೆ.
ಮೊಹಮದ್ ಸಿರಾಜ್ ಆಸ್ಟ್ರೇಲಿಯಾದಲ್ಲಿರುವಾಗಲೇ ಹೈದರಾಬಾದ್ನಲ್ಲಿದ್ದ ಅವರ ತಂದೆ ಮೃತಪಟ್ಟಿದ್ದರು. ಆದಾಗ್ಯೂ ಸಿರಾಜ್ ತಾಯ್ನಾಡಿಗೆ ಬಾರದೇ ಟೀಂ ಇಂಡಿಯಾ ಪರವಾಗಿ ಆಡಿದ್ದರು. ಮೊಹಮದ್ ಸಿರಾಜ್ ಗಾಬಾದಲ್ಲಿ ನಡೆದ ಟೆಸ್ಟ್ನ ಕೊನೆಯ ಪಂದ್ಯದಲ್ಲಿ ಸಿರಾಜ್ ಐದು ವಿಕೆಟ್ ಕಿತ್ತು ಪ್ರಮುಖ ಆಟಗಾರ ಎನಿಸಿಕೊಂಡಿದ್ದರು. ಈಗ ಟೆಸ್ಟ್ ಮುಗಿಸಿ ಭಾರತಕ್ಕೆ ವಾಪಾಸಾಗಿರುವ ಅವರು ನೇರವಾಗಿ ತಂದೆಯ ಅಂತ್ಯ ಸಂಸ್ಕಾರ ನಡೆದ ಜಾಗಕ್ಕೆ ತೆರಳಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಃಖದ ಕಟ್ಟೆ ಒಡೆದಿತ್ತು..
ತಂದೆಯನ್ನು ಕಳೆದುಕೊಂಡು ಅಲ್ಲೇ ಇರುವುದು ಕಠಿಣ ಸಂದರ್ಭವಾಗಿತ್ತು. ಆದರೆ, ತಾಯಿ ಜೊತೆ ಮಾತನಾಡಿದಾಗ ನನ್ನಲ್ಲಿ ಹೊಸ ಸ್ಫೂರ್ತಿ ಬಂದಿತ್ತು. ಕ್ರಿಕೆಟ್ನಲ್ಲಿ ಸಾಧನೆ ಮಾಡಬೇಕು ಎನ್ನುವುದು ನನ್ನ ತಂದೆಯ ಕನಸು. ಹೀಗಾಗಿ, ನಾನು ಮಾನಸಿಕವಾಗಿ ಗಟ್ಟಿಯಾದೆ. ಕ್ರಿಕೆಟ್ನಲ್ಲಿ ಒಂದು ಹಂತದಲ್ಲಿ ಸಾಧನೆ ಮಾಡಿ, ತಂದೆಯ ಕನಸನ್ನು ಈಡೇರಿಸುತ್ತೇನೆ ಎಂದರು ಸಿರಾಜ್.