ಡಿ’ವಿಲಿಯರ್ಸ್ ಭರ್ಜರಿ ಅರ್ಧಶತಕ: ಆರ್’ಸಿಬಿಗೆ ಮೊದಲ ಜಯ!
ನ್ಯೂಸ್ ಕನ್ನಡ ವರದಿ-(13.04.18): ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ವಿರುದ್ಧ ಸೋಲನ್ನಪ್ಪಿಕೊಂಡಿತ್ತು. ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಪಂದ್ಯದಲ್ಲಿ ಇದೀಗ ರಾಯಲ್ ಚಾಲೆಂಜರ್ಸ್ ತಂಡವು ಪ್ರಥಮ ಜಯದೊಂದಿಗೆ ತನ್ನ ವಿಜಯ ಖಾತೆಯನ್ನು ಆರಂಭಿಸಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸ್ಫೋಟಕ ಆರಂಭವನ್ನೇ ಪಡೆಯಿತು. ಕನ್ನಡಿಗ ಕೆ,ಎಲ್ ರಾಹುಲ್ ಭರ್ಜರಿ 47 ರನ್ ಗಳಿಸಿದರು. ಉಮೇಶ್ ಯಾದವ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಪಂಜಾಬ್ ತಂಡದ ಪ್ರಮುಖ ಮೂರು ವಿಕೆಟ್ ಗಳನ್ನು ಒಂದೇ ಓವರ್ ನಲ್ಲಿ ಉರುಳಿಸಿದರು. ಕರುಣ್ ನಾಯರ್(29) ಮತ್ತು ಆರ್.ಅಶ್ವಿನ್ (23) ರನ್ ದಾಖಲಿಸಿದರು. ಬೇರೆ ಯಾರೂ ಉತ್ತಮ ಪ್ರದರ್ಶನವನ್ನು ತೋರಲಿಲ್ಲ. ಬೌಲಿಂಗ್ ನಲ್ಲಿ ಉಮೇಶ್ ಯಾದವ್ 3 ವಿಕೆಟ್, ಕುಲವಂತ್ ಕೇಜ್ರೋಲಿಯಾ 2 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದು ಮಿಂಚಿದರು.
ಬಳಿಕ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದ್ದು, ಎದುರಿಸಿದ ಪ್ರಥಮ ಬಾಲ್ ನಲ್ಲೇ ಮೆಕಲಮ್ ಔಟ್ ಆದರು. ಬಳಿಕ ವಿರಾಟ್ ಕೊಹ್ಲಿ(21) ಮತ್ತು ಕ್ವಿಂಟನ್ ಡಿಕಾಕ್(45) ಚೇತರಿಕೆಯ ಆಟವಾಡಿದರು. 17ರ ಹರೆಯದ ಅಫ್ಘಾನ್ ಬೌಲರ್ ಮುಜೀಬ್ ಎಸೆತಕ್ಕೆ ವಿರಾಟ್ ಕೊಹ್ಲಿ ಬೌಲ್ಡ್ ಆದರು. ಸೋಲುವ ಭೀತಿಯಲ್ಲಿದ್ದ ತಂಡವನ್ನು ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವಿಲಿಯರ್ಸ್(57) ಅರ್ಧಶತಕ ಬಾರಿಸುವ ಮೂಲಕ ಚೇತರಿಕೆಯ ಹಂತಕ್ಕೆ ಸಾಗಿಸಿದರು. ಮನ್ ದೀಪ್ ಸಿಂಗ್ ವಿಲಿಯರ್ಸ್ ಗೆ ಸಾಥ್ ನೀಡಿದರು. ಕೊನೆಗೆ 19.2 ಓವರ್ ಗಳಲ್ಲಿ ಆರ್ಸಿಬಿ ತಂಡವು ಓವರ್ ಗಳಲ್ಲಿ 156 ರನ್ ಗಳ ಗುರಿ ತಲುಪಿತು.