ರಾಮ ಮಂದಿರ ನಿರ್ಮಾಣಕ್ಕಿಂತ ಮೊದಲು ‘ರಮ್ ಮಂದಿರ’ ಮುಚ್ಚಿಸಬೇಕಾಗಿದೆ: ಸ್ವಾಮಿ ಅಗ್ನಿವೇಶ್!
ನ್ಯೂಸ್ ಕನ್ನಡ ವರದಿ(19-04-2018): ಕೇಂದ್ರ ಸರಕಾರವು ರಾಮ ಮಂದಿರವನ್ನು ನಿರ್ಮಿಸಲು ಹೊರಟಿದೆ. ರಾಮ ಮಂದಿರ ನಿರ್ಮಿಸುವುದಕ್ಕಿಂತ ಮೊದಲು ರಮ್ ಮಂದಿರವನ್ನು ಮುಚ್ಚಿಸಬೇಕಾಗಿದೆ ಎಂದು ಬಂಧುವಾ ಮುಕ್ತಿ ಮೋರ್ಚಾ ಅಧ್ಯಕ್ಷ, ನಶಾ ಮುಕ್ತ ಭಾರತ ಸಂಘಟನೆ ಮುಖಂಡ ಅಗ್ನಿವೇಷ್ ಅಭಿಪ್ರಾಯ ಪಟ್ಟಿದ್ದಾರೆ.
ರಾಮ ಮಂದಿರ ಇಂದಿನ ಅಗತ್ಯವಲ್ಲ ಅದಕ್ಕಿಂತ ಮೊದಲು ದೇಶದಲ್ಲಿ ತುಂಬಿಕೊಂಡಿರುವ ಮದ್ಯದ ಅಂಗಡಿಯನ್ನು ಮುಚ್ಚಿಸಬೇಕಾಗಿದೆ ಎಂದರು. ನೋಟು ಅಮಾನ್ಯೀಕರಣದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಇದೀಗ ದೇಶದಲ್ಲಿ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಹಣವೇ ಸಿಗದಂತಾಗಿದೆ. ಯೋಜನಾ ಇಲಾಖೆಯನ್ನು ತೆಗೆದು ನೀತಿ ಆಯೋಗ ರಚಿಸಲಾಗಿದ್ದು, ಅದರಿಂದ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದರು.
ದೇಶದಲ್ಲಿ ಸರ್ಕಾರಿ ಶಾಲೆಗಳು ಯತೀಮ್ ಖಾನಾಗಳಾಗಿ ಮಾರ್ಪಟ್ಟಿವೆ ಎಂದು ಇದೇ ಸಂದರ್ಭದಲ್ಲಿ ಅಗ್ನಿವೇಷ್ ಆರೋಪಿಸಿದ್ದಾರೆ. ಕಡ್ಡಾಯ ಶಿಕ್ಷಣ ಎಂದು ಹೇಳುವ ಸರ್ಕಾರ, ಸರ್ಕಾರಿ ಶಾಲೆಗಳನ್ನು ಅಧೋಗತಿಗೆ ತಳ್ಳಿದೆ. ಸಚಿವರು, ಸಂಸದರು, ಶಾಸಕರು, ಐಎಎಸ್, ಐಪಿಎಸ್ ಮತ್ತಿತರ ಸರ್ಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಡ್ಡಾಯವಾಗಿ ಸೇರಿಸಬೇಕು. ಸರ್ಕಾರಿ ಶಾಲೆ ಬೇಡ ಎನ್ನುವುದಾದರೆ ಅವರು ವಿದೇಶದಲ್ಲಿ ಶಾಲೆಗೆ ಸೇರಿಸಲಿ. ಆದರೆ ಸಚಿವ ಸ್ಥಾನ, ಸಂಸದ-ಶಾಸಕ ಸ್ಥಾನ, ಸರ್ಕಾರಿ ಹುದ್ದೆಗಳನ್ನು ಬಿಡಲಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.